ಜಾರ್ಜ್ ಥಾಮಸ್‌ರವರು (ಹುಟ್ಟಿದ್ದು ಏಪ್ರಿಲ್ ೧೫, ೧೯೬೬) ಭಾರತದ ಕೇರಳ ರಾಜ್ಯದ ಮಾಜಿ ಬ್ಯಾಡ್ಮಿಂಟನ್ ಆಟಗಾರ. == ಬಾಲ್ಯ ಜೀವನ == ಬ್ಯಾಡ್ಮಿಂಟನ್ನಲ್ಲಿ ಅವರಿಗಿದ್ದ ಉತ್ಸಾಹವನ್ನು ಹೋಲುವ ಇನ್ನೊಂದು ವಿಚಾರವೆಂದರೆ ಅದು ಎಮ್. ಟಿ. ವಾಸುದೇವನ್ ನಾಯರ್‌ರವರ ಕಥೆಗಳು, ಕಾದಂಬರಿಗಳು, ಚಿತ್ರಕಥೆಗಳು ಹಾಗು ಚಲನಚಿತ್ರಗಳು. ಇವರಿಗೆ ಬಾಲ್ಯದಿಂದಲೂ ಬ್ಯಾಡ್ಮಿಂಟನ್ ಆಟದಲ್ಲಿ ಬಹಳ ಆಸಕ್ತಿ ಇತ್ತು. ಇವರ ತಂದೆ ಹಾಗೂ ಅಣ್ಣ ಇಬ್ಬರೂ ಕ್ರೀಡಾಪಟುಗಳಾದ ಕಾರಣ, ಜಾರ್ಜ್‌ರವರಿಗೆ ಉತ್ತಮ ಪ್ರೋತ್ಸಾಹ ಸಿಕ್ಕಿತ್ತು. ೧೦೦ ಮೀಟರ್ ದೂರದ ಓಟವನ್ನು ೧೨ ಸೆಕೆಂಡುಗಳಲ್ಲಿ ಓಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದ ಜಾರ್ಜ್‌ರವರ ಒಲವು ಬ್ಯಾಡ್ಮಿಂಟನ್‍ನತ್ತ ತಿರುಗಿ, ತಿರುವನಂತಪುರದಲ್ಲಿರುವ ಜಿ.ವಿ. ರಾಜ ಕ್ರೀಡಾಶಾಲೆಗೆ ಸೇರಿದರು. == ವೃತ್ತಿಪರ ಜೀವನ == ತಿರುವನಂತಪುರದ ಜಿ.ವಿ.ರಾಜ ಕ್ರೀಡಾಶಾಲೆಯಲ್ಲಿ ಬಾಲಗೋಪಾಲನ್ ಥಂಪಿ ಮತ್ತು ಶಿವರಾಮಕೃಷ್ಣನ್‍ರವರ ಬಳಿ ತಗೆದುಕೊಂಡ ತರಬೇತಿ, ಅವರ ಮುಂದಿನ ಬ್ಯಾಡ್ಮಿಂಟನ್ ವೃತ್ತಿಜೀವನಕ್ಕೆ ಅಡಿಪಾಯವಾಯಿತು. ಕ್ರೀಡಾಶಾಲೆಯಿಂದ ಹೊರಬಂದ ನಂತರ, ಅವರು ಥ್ರೀಸೂರ್ನಲ್ಲಿರುವ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ಆದರೆ ಅವರಿಗೆ ಬ್ಯಾಡ್ಮಿಂಟನ್‍ನಲ್ಲಿ ಇದ್ದ ಆಸಕ್ತಿ ಕಡಿಮೆಯಾಗಲ್ಲಿಲ್ಲ. ಕಿರಿಯ ವಿಭಾಗದ ಏಷ್ಯನ್ ಚಾಂಪಿಯನ್‍ಷಿಪ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಅವರು ಸೌಲ್‍ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್ನಲ್ಲಿ ಆಡಲು ಹಿರಿಯ ತಂಡಕ್ಕೆ ಆಯ್ಕೆಯಾದರು. ಆದರೆ ಹಣಕಾಸಿನ ಸಮಸ್ಯೆಯಾದ ಕಾರಣದಿಂದ ಅವರಿಗೆ ಹೋಗಲು ಸಾಧ್ಯವಾಗಲ್ಲಿಲ್ಲ. ಅಂದು ಭಾರತ ದೇಶದಲ್ಲಿ ಬ್ಯಾಡ್ಮಿಂಟನ್ ಆಟವನ್ನು ಹೆಚ್ಚಾಗಿ ಆಡದ ಕಾರಣದಿಂದ ಅವರಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಆದರೂ ತಮ್ಮ ಛಲವನ್ನು ಬಿಡದೆ ಪ್ರತಿದಿನ ಶ್ರಮಿಸಿದರು. ಅವರ ಈ ಛಲಕ್ಕೆ ಹುರಿದುಂಬಿಸಿದ್ದು ಪ್ರಕಾಶ್ ಪಡುಕೋಣೆರವರ ಮಾತ. ಅದೇನೆಂದರೆ, ಓರ್ವ ಆಟಗಾರನ ಕುಸಿತಕ್ಕೆ ಪ್ರಮುಖ ಕಾರಣವೇ ಅವನ ಅಸಮಾಧಾನ. ಅವರ ನಿರಂತರ ಪ್ರಯತ್ನ ಮತ್ತು ಶ್ರಮ ವ್ಯರ್ಥವಾಗಲಿಲ್ಲ. ಸತತ ೧೧ ವರ್ಷಗಳವರೆಗೆ ಇವರು ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದರು. ಇವರು ಪಟಿಯಾಲಾದಲ್ಲಿ ನಡೆದ ರಾಷ್ಟ್ರೀಯ ಶಿಬಿರಕ್ಕೆ ಸೇರಿದರು. ನಂತರ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ರಾಷ್ಟ್ರೀಯ ಹಿರಿಯ ಸಿಂಗಲ್ ಟೈಟಲ್ಸ್, ಟೌಲೌಸ್ ಓಪನ್‍ನಲ್ಲಿ ದಬಲ್ ಟೈಟಲ್ಸ್ ಮುಂತಾದ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಜಯಭೇರಿ ಬಾರಿಸಿದರು. ೧೯೮೯ರಿಂದ ೨೦೦೦ದವರೆಗೆ ಭಾರತ ತಂಡದಲ್ಲಿ ಪ್ರಮುಖ ಪಾತ್ರವಹಿಸಿದರು. ನಂತರ ಇವರು ಹಿರಿಯ ವ್ಯವಸ್ಥಾಪಕರಾಗಿ(ಸಾರ್ವಜನಿಕ ಸಂಪರ್ಕ) ಭಾರತ್ ಪೆಟ್ರೋಲಿಯಂ ನಿಗಮ ಲಿಮಿಟೆಡ್‍ನಲ್ಲಿ ಕೆಲಸ ನಿರ್ವಹಿಸಿದರು. ಕೊಚ್ಚಿಯ ಪ್ರಾದೇಶಿಕ ಕ್ರೀಡೆ ಕೇಂದ್ರ (ಆರ್.ಎಸ್.ಎಸ್) ನಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು. ಇವರಡಿಯಲ್ಲಿ ೩೦ ರಾಜ್ಯ ಮಟ್ಟದ ಹಾಗು ೪೦ ರಾಷ್ಟ್ರ ಮಟ್ಟದ ಆಟಗಾರರು ಹೊರಹೊಮ್ಮಿದರು. == ವೈಯಕ್ತಿಕ ಜೀವನ == ಅಂದಿನ ಕಾಲದಲ್ಲಿ ಕ್ರೀಡೆಯನ್ನೇ ವೃತ್ತಿಜೀವನವನ್ನಾಗಿಸುಕೊಳ್ಳುವುದು ಮಧ್ಯಮ ವರ್ಗದ ಕುಟುಂಬದಿಂದ ಬಂದವರಿಗೆ ಬಹಳ ಕಷ್ಟಕರ. ಆದ್ದರಿಂದ ಇಂಜಿನಿಯರಿಂಗ್ ಓದಬೇಕಾಗಿ ಬಂದಿತು ಎಂದು ಸ್ವತಃ ಜಾರ್ಜ್‌ರವರೇ ಈ ಹಿಂದೆ ಹೇಳಿದ್ದರು. ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಪ್ರೀತಾರವರನ್ನು ವಿವಾಹವಾದರು. ಅವರ ಇಬ್ಬರು ಮಕ್ಕಳಾದ ಅರುಣ್ ಮತ್ತು ಕಿರಣ್ ರಾಜ್ಯ ಮಟ್ಟದ ಆಟಗಾರರಾಗಿದ್ದಾರೆ. == ಪ್ರಶಸ್ತಿಗಳು == ೧೯೯೦ರ ರಾಷ್ಟ್ರೀಯ ಸಿಂಗಲ್ ಟೈಟಲ್ಸ್ ಪ್ರಶಸ್ತಿ ೧೯೯೨ರ ಡಬಲ್ ಟೈಟಲ್ಸ್ ಅನ್ನು ಜಸೀಲ್ ಪಿ ಇಸ್ಮೈಲ್‍ರವರ ಜೊತೆಗೆ ಗೆದ್ದಿದ್ದಾರೆ ೧೯೯೮ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು ಭಾರತ ಸರ್ಕಾರ ೨೦೦೨ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. == ಉಲ್ಲೇಖಗಳು ==